ಬೆಳ್ತಂಗಡಿ: ತಾಲೂಕಿನ ಶಿರ್ಲಾಲು ಗ್ರಾಮದ ಸುದೇರ್ದು ನಿವಾಸಿ ರವಿಚಂದ್ರ ಪೂಜಾರಿಯವರ ಪುತ್ರ ಸುಜಿತ್ (23 ವ.) ಬಳ್ಳಾರಿಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಎರಡು ವರ್ಷಗಳ ಹಿಂದೆ ಜಿಂದಾಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ಸುಜಿತ್ ಕುಮಾರ್, ಉದ್ಯೋಗದ ನಿಮಿತ್ತ ಬಳ್ಳಾರಿಯಲ್ಲಿಯೇ ನೆಲೆಸಿದ್ದರು.
ಜೂ.16ರ ವರೆಗೂ ಸ್ನೇಹಿತರ ಜೊತೆಯಲ್ಲಿಯೇ ಇದ್ದ ಸುಜಿತ್ ಅಂದು ಮಧ್ಯಾಹ್ನದ ಬಳಿಕ ನಾಪತ್ತೆಯಾಗಿದ್ದರೆಂದು ಎಂದು ಹೇಳಲಾಗುತ್ತಿದ್ದು, ಜೂ.17ರಂದು ಕಂಪನಿಗೆ ಸೇರುವ ಗೆಸ್ಟ್ ಹೌಸ್ನಲ್ಲಿ ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ಬಳ್ಳಾರಿಯಿಂದ ಕರೆ ಮಾಡಿ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದು, ಪ್ರಕರಣ ಬೆಳಕಿಗೆ ಬಂದಿದೆ.
ಆರ್ಥಿಕ ವ್ಯವಹಾರವೊಂದರಲ್ಲಿ ನಷ್ಟ ಅನುಭವಿಸಿದ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದು, ಈ ಕುರಿತು ಸುಜಿತ್ ಮನೆಯವರಿಗೂ ಸಂದೇಶ ಕಳುಹಿಸಿದರೆಂದು ತಿಳಿದುಬಂದಿದೆ.
ರವಿಚಂದ್ರ ಪೂಜಾರಿ ಅವರಿಗೆ ಮೂವರು ಮಕ್ಕಳಿದ್ದು, ಆ ಪೈಕಿ ಅಣ್ಣ ಸುನಿಲ್ ಕುಮಾರ್ ಶಿರ್ಲಾಲು ಮಿಲ್ಕ್ ಸೊಸೈಟಿಯಲ್ಲಿ ಉದ್ಯೋಗಿಯಾಗಿದ್ದಾರೆ. ಸಹೋದರಿಗೆ ಮೇ. 20ರಂದು ವಿವಾಹವಾಗಿದ್ದು, ಅಕ್ಕನ ಮದುವೆಗೆ ಬಂದಿದ್ದ ಕಿರಿಯ ಮಗ ಸುಜಿತ್ 15 ದಿನಗಳ ಹಿಂದಷ್ಟೇ ಬಳ್ಳಾರಿಗೆ ಉದ್ಯೋಗಕ್ಕೆ ಮರಳಿದ್ದರು. ಜೂ.18ರ ರಾತ್ರಿ 10 ಗಂಟೆಗೆ ಸುಜಿತ್ ಅವರ ಮೃತದೇಹವನ್ನು ಊರಿಗೆ ತಂದು ಅಂತ್ಯಕ್ರಿಯನ್ನು ನಡೆಸಲಾಗಿದೆ.