ಬೆಟ್ಟಂಪಾಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ಐ.ಕ್ಯೂ.ಎ.ಸಿ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ಸ್ವಯಂಸೇವಕರಿಗೆ ಮಾನಸಿಕ ಮತ್ತು ಸಾಮಾಜಿಕ ಕೌಶಲ್ಯಗಳ ಕುರಿತು ಆನ್ಲೈನ್ ಕಾರ್ಯಾಗಾರವು ಜೂ.16 ರಂದು ನಡೆಯಿತು.
ಕಾರ್ಯಕ್ರಮದ ಕುರಿತು ಮಾತನಾಡಿದ ಎಸ್.ಬಿ.ಎಮ್.ಜೆ ಕಾಲೇಜಿನ ಉಪನ್ಯಾಸಕಿ ನಝ್ನೀನ್ ಅಹ್ಮದ್ ಇವರು ಕೋವಿಡ್ ಸೋಂಕಿತರೊಂದಿಗೆ ಸಂವಾದ ಮತ್ತು ಅವರಿಗೆ ಧೈರ್ಯ ತುಂಬಲು ವಿದ್ಯಾರ್ಥಿಗಳು ಯಾವ ರೀತಿ ಕಾರ್ಯ ಪ್ರವೃತರಾಗಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಹೈದರಾಬಾದ್ ನ ಎಮ್.ಜಿ.ಎನ್.ಸಿ.ಆರ್.ಇ ನ . ಮೆಲ್ವಿನ್ ನ್ಹರೋನಾ ಇವರು ಮೊದಲು ನಾವು ನಮ್ಮ ಬಗ್ಗೆ ಕಾಳಜಿ ವಹಿಸಬೇಕು ಆಗ ಮಾತ್ರ ನಾವು ಇತರರ ಬಗ್ಗೆ ಕಾಳಜಿ ವಹಿಸಬಹುದು ಎಂದು ಸಲಹೆ ನೀಡಿದರು ನಂತರ ಸ್ವಯಂಸೇವಕರು ಕಾರ್ಯ ರೂಪಕ್ಕೆ ತರಬಹುದಾದಂತಹ ಅನೇಕ ವಿಚಾರಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ಕೊರೋನಾ ಲಸಿಕೆ ಕುರಿತು ಜಾಗೃತಿ ಮೂಡಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾದದ್ದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಗೂಗಲ್ ಮೀಟ್ ಮೂಲಕ ನಡೆದಂತಹ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎನ್ನೆಸ್ಸೆಸ್ ಸ್ವಯಂ ಸೇವಕರು ಭಾಗವಹಿಸಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕರು ಮತ್ತು ಎನ್ನೆಸ್ಸೆಸ್ ಅಧಿಕಾರಿಗಳಾದ ಹರಿಪ್ರಸಾದ್ ಎಸ್ ಸ್ವಾಗತಿಸಿದರು. ಸ್ವಯಂ ಸೇವಕರಾದ ಶೃತಿಕಾ ವಂದಿಸಿದರು, ಅನುಪಮ ಕೆ ಕಾರ್ಯಕ್ರಮ ನಿರ್ವಹಿಸಿದರು.