ಪುತ್ತೂರು : ನಗರದಲ್ಲಿ ನಿತ್ಯ ಸೃಷ್ಟಿಯಾಗುವ ೧೫ ಟನ್ ತ್ಯಾಜ್ಯವೂ ಸೇರಿದಂತೆ ಒಟ್ಟು ೨೦ ಟನ್ ತ್ಯಾಜ್ಯವನ್ನು ಬಳಸಿಕೊಂಡು ಜೈವಿಕ ಅನಿಲ ತಯಾರಿಸುವ ಜಿಲ್ಲೆಯ ಪ್ರಥಮ ಬಯೋಗ್ಯಾಸ್ ಸ್ಥಾವರ ನಿರ್ಮಾಣಕ್ಕೆ ಪುತ್ತೂರಿನ ಬನ್ನೂರು ಡಂಪಿಂಗ್ ಯಾರ್ಡ್ನಲ್ಲಿ ಜೂ.21 ರಂದು ಶಂಕುಸ್ಥಾಪನೆ ನೆರವೇರಿಸಲಾಯಿತು.
ಡಂಪಿಂಗ್ ಯಾರ್ಡ್ನ ೭ ಎಕರೆ ಜಾಗದ ಪೈಕಿ ೨ ಎಕರೆ ಜಮೀನಿನಲ್ಲಿ ಪುತ್ತೂರು ರೋಟರಿ ಪೂರ್ವ ಸಂಸ್ಥೆಯು ೪.೫ ಕೋಟಿ ರೂ. ವೆಚ್ಚದಲ್ಲಿ ಪಿಪಿಪಿ (ಸರಕಾರಿ ಖಾಸಗಿ ಸಹಭಾಗಿತ್ವ) ಯೋಜನೆಯಂತೆ ಸ್ಥಾವರ ನಿರ್ಮಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶಂಕುಸ್ಥಾಪನೆ ನೆರವೇರಿಸಿದರು. ಗ್ರಾಪಂ ಮತ್ತು ಪೌರಾಡಳಿತ ಸಂಸ್ಥೆಗಳಲ್ಲಿ ಇಂದು ತ್ಯಾಜ್ಯ ನಿರ್ವಹಣೆಯೇ ದೊಡ್ಡ ಸವಾಲು.ರೋಟರಿ ಸಂಸ್ಥೆ ಮುಂದಾಳತ್ವದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಎಲ್ಲವನ್ನೂ ಸರಕಾರವೇ ಮಾಡಬೇಕು ಎಂಬ ಮನಸ್ಥಿತಿಯ ಮಧ್ಯೆ, ಪುತ್ತೂರಿನಲ್ಲಿ ಚಾರಿತ್ರಿಕ ವಿದ್ಯಮಾನ ನಡೆದಿದೆ ಎಂದರು.
ರೋಟರಿ ಜಿಲ್ಲೆ ೩೧೮೧ರ ಜಿಲ್ಲಾ ಗವರ್ನರ್ ರಂಗನಾಥ ಭಟ್ ಫಲಕ ಅನಾವರಣಗೊಳಿಸಿದರು. ಶಾಸಕರಾದ ಸಂಜೀವ ಮಠಂದೂರು,ಅಸಿಸ್ಟೆಂಟ್ ಗವರ್ನರ್ ಸಚ್ಚಿದಾನಂದ, ನಗರ ಸಭೆ ಅಧ್ಯಕ್ಷ ಜೀವಂಧರ್ ಜೈನ್, ರೋಟರಿ ಪೂರ್ವ ಅಧ್ಯಕ್ಷರಾದ ಕೃಷ್ಣ ನಾರಾಯಣ ಮುಳಿಯ,ರೋಟರಿ ಪೂರ್ವ ಕಾರ್ಯದರ್ಶಿ ರವಿ ಕುಮಾರ್, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು ಉಪಸ್ಥಿತರಿದ್ದರು. ನಗರಸಭೆ ಪೌರಾಯುಕ್ತರಾದ ಮಧು ಎಸ್. ಮನೋಹರ್ ವಂದಿಸಿದರು. ಶಶಿಧರ್ ಕಿನ್ನಿಮಜಲ್ ಕಾರ್ಯಕ್ರಮ ನಿರ್ವಹಿಸಿದರು.