ಪುತ್ತೂರು: ಸುಮಾರು 20 ವರ್ಷಗಳಿಂದ ಡಾ|ಶಿವರಾಮ ಕಾರಂತರ ಬಾಲವನದಲ್ಲಿ ಯಾವುದೇ ಒಂದು ಸಮಿತಿ ರಚನೆ ಆಗಿಲ್ಲ.ಈ ಹಿಂದೆ ಒಂದು ಟ್ರಸ್ಟ್ ಮಾಡಿದ್ದರು. ಅದರಲ್ಲಿ ಯಾವುದೇ ನಿರ್ಣಯವೂ ಆಗಿರಲಿಲ್ಲ. ಪ್ರಕೃತಿ ಹಾಳಾಗಬಾರದು ಎಂಬ ಡಾ|ಶಿವರಾಮ ಕಾರಂತರ ಕನಸು ಮತ್ತು ಅವರಲ್ಲಿದ್ದ ಸಾಂಸ್ಕೃತಿಕ ವಿಚಾರಕ್ಕೆ ಒತ್ತು ಕೊಡಬೇಕೆಂಬ ಉದ್ದೇಶವಿಟ್ಟುಕೊಂಡು ಇನ್ನು ಮುಂದೆ ಬಾಲವನದಲ್ಲಿ ಪ್ರತಿ ತಿಂಗಳು ಸಾಹಿತ್ಯಕ್ಕೆ ಪೂರಕವಾಗಿ ಒಂದೊಂದು ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ಸಹಾಯಕ ಕಮೀಷನರ್ ಕೋರ್ಟ್ ಸಭಾಂಗಣದಲ್ಲಿ ಮೇ 2ರಂದು ಸಂಜೆ ನಡೆದ ಬಾಲವನ ಅಭಿವೃದ್ಧಿ ಸಮಿತಿಯ ಪ್ರಥಮ ಸಭೆಯ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
ಇಲ್ಲಿನ ತನಕ ಬಾಲವನದಲ್ಲಿ ಯಾವುದೇ ಕಾಮಗಾರಿಗಳು ಆಗಿಲ್ಲ.ಸುಮಾರು ರೂ.1.45 ಕೋಟಿ ಬಾಲವನ ಟ್ರಸ್ಟ್ನ ಹೆಸರಿನಲ್ಲಿದೆ. ಈಜುಕೊಳ ಸಮಿತಿಯಲ್ಲಿ ಸುಮಾರು ರೂ.18.83 ಲಕ್ಷ ಇದೆ.ಜನರರ್ ಅಕೌಂಟ್ ನಲ್ಲಿ ರೂ.25 ಲಕ್ಷ ಇದೆ. ಸುಮಾರು 6ಲಕ್ಷರೂಪಾಯಿ ಆದಾಯವಿದೆ.
ವಿದ್ಯುತ್ ಇತರ ಒಟ್ಟು ರೂ.6.28 ಲಕ್ಷ ಖರ್ಚು ಆಗುತ್ತಿದೆ. ಆದರೆ ಬಾಲವನ ಮಾತ್ರ ಅಭಿವೃದ್ಧಿ ಕಂಡಿಲ್ಲ.ಈ ಕುರಿತು ಕಳೆದ ಒಂದು ತಿಂಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಕಮೆಂಟ್ ಬರುತ್ತಿತ್ತು. ಅಲ್ಲಿನ ಮಕ್ಕಳ ಆಟಿಕೆಗಳು ಕೆಟ್ಟು ಹೋಗಿದ್ದು, ಅದು ದುರಸ್ತಿಯಾಗಬೇಕಾಗಿದೆ. ಇದೆನ್ನೆಲ್ಲ ಗಮನದಲ್ಲಿಟ್ಟುಕೊಂಡು ನಾನೇ ವೈಯುಕ್ತಿಕವಾಗಿ ಸರಕಾರದಿಂದ ಸಮಿತಿ ರಚನೆ ಮಾಡಿಸಿ ಅಭಿವೃದ್ಧಿಗೆ ಚಿಂತನೆ ಮಾಡಿದ್ದೇವೆ.ಬಾಲವನ ಅಭಿವೃದ್ಧಿಗೆ ಸರಕಾರದಿಂದ ವರ್ಷಕ್ಕೆ ರೂ.8 ಲಕ್ಷ ಬರುತ್ತದೆ. ಇದೆನ್ನಲ್ಲ ಸೇರಿಸಿಕೊಂಡು ಮುಂದೆ ತಿಂಗಳಿಗೊಂದರಂತೆ, ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿ ಯಕ್ಷಗಾನ, ನಾಟಕ, ಶಿಬಿರ ಸೇರಿ ಒಟ್ಟು ಕಾರ್ಯಕ್ರಮಗಳನ್ನು ಮಾಡುವ ಯೋಜನೆ ಹಾಕಿಕೊಂಡಿದ್ದೇವೆ.
ಅದರ ಮೊದಲು ಬಾಲವನದಲ್ಲಿ ಒಂದು ವಾರದೊಳಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ.
ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿಯುವುದು, ಪರಿಸರದಲ್ಲಿ ರಾತ್ರಿ ವಿದ್ಯುತ್ ದೀಪಗಳ ಅಳವಡಿಕೆ ಮತ್ತು ಸಿಬ್ಬಂದಿಗಳಿಗೆ ವೇತನ ಏರಿಕೆ ಮಾಡಲಿದ್ದೇವೆ ಎಂದರು.
ಬಾಲವನ ಅಭಿವೃದ್ಧಿಸಮಿತಿ ಸದಸ್ಯ ಕಾರ್ಯದರ್ಶಿಯಾಗಿರುವ ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್, ಬಾಲವನ ಅಭಿವೃದ್ಧಿ ಸಮಿತಿ ಸದಸ್ಯರಾದ ಪ್ರೋ|ದತ್ತಾತ್ರೆಯ ರಾವ್, ಸ್ವಾತಿ ಜೆ ರೈ, ಶಿವಪ್ರಸಾದ್ ರೈ, ಪಾರ್ಥ ವಾರಣಾಸಿ, ಬಾಲವನ ನಿರ್ವಹಣಾ ಕಾರ್ಯ ಮಾಡುತ್ತಿರುವ ಅಶೋಕ್, ಸುಂದರ ನಾಯ್ಕ, ಉಪತಹಸೀಲ್ದಾರ್ ಮತ್ತಿತರರು ಉಪಸ್ಥಿತರಿದ್ದರು.

























