ಲಕ್ನೋ: ಅನಾರೋಗ್ಯದಿಂದ ಸಾವನ್ನಪ್ಪಿರುವ ಬಿಜೆಪಿ ಹಿರಿಯ ನಾಯಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ (Kalyan Singh) ಅವರ ಅಂತ್ಯಸಂಸ್ಕಾರ ಇಂದು ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ಅಲಿಘಢ ವಿಮಾನ ನಿಲ್ದಾಣಕ್ಕೆ ಕಲ್ಯಾಣ್ ಸಿಂಗ್ ಅವರ ಹೆಸರನ್ನಿಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಅದರ ಬದಲಾಗಿ ಉತ್ತರ ಪ್ರದೇಶದ ಅಯೋಧ್ಯೆ, ಲಕ್ನೋ ಸೇರಿದಂತೆ 6 ಜಿಲ್ಲೆಗಳ ರಸ್ತೆಗಳಿಗೆ ಕಲ್ಯಾಣ್ ಸಿಂಗ್ ಅವರ ಹೆಸರಿಡಬೇಕೆಂದು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಇಂದು ಘೋಷಣೆ ಮಾಡಿದ್ದಾರೆ.
ಕಲ್ಯಾಣ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗಲೇ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಲಾಗಿತ್ತು. ಬಿಜೆಪಿಯ ಕ್ರಾಂತಿಕಾರಿ ನಾಯಕರಾಗಿದ್ದ ಕಲ್ಯಾಣ್ ಸಿಂಗ್ ಸ್ಮರಣಾರ್ಥ ಉತ್ತರ ಪ್ರದೇಶದ 6 ಜಿಲ್ಲೆಗಳ ಪ್ರಮುಖ ರಸ್ತೆಗಳಿಗೆ ಕಲ್ಯಾಣ್ ಸಿಂಗ್ ಹೆಸರನ್ನಿಡಲು ಸರ್ಕಾರ ತೀರ್ಮಾನಿಸಿದೆ.
ಅಯೋಧ್ಯೆಯ ರಾಮಜನ್ಮಭೂಮಿಗೆ ತೆರಳುವ ರಸ್ತೆ ಮಾರ್ಗಕ್ಕೆ ಕಲ್ಯಾಣ್ ಸಿಂಗ್ ಹೆಸರಿಡಲಾಗುವುದು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಲ್ಯಾಣ್ ಸಿಂಗ್ ಅವರೇ ನಮಗೆ ಸ್ಫೂರ್ತಿ. ರಾಮ ಮಂದಿರಕ್ಕಾಗಿ ಕಲ್ಯಾಣ್ ಸಿಂಗ್ ಮಾಡಿದ ತ್ಯಾಗ ಮರೆಯಲಾಗದು. ಅವರ ನೆನಪಿನಲ್ಲಿ ರಸ್ತೆಗಳಿಗೆ ಅವರ ಹೆಸರನ್ನಿಡಲಾಗುವುದು ಎಂದು ಉತ್ತರ ಪ್ರದೇಶದ ಡಿಸಿಎಂ ತಿಳಿಸಿದ್ದಾರೆ.