ಸುಳ್ಯ: ಆಲೆಟ್ಟಿ ಗ್ರಾಮದ ರಂಗತ್ತ ಮಲೆ ನಿವಾಸಿ ಪುಷ್ಪಾವತಿ ಎಂಬವರ ಪುತ್ರಿ ಬಾಲಕಿ ಶಶಿಕಲಾ ಆ. ೨೨ರಂದು ಮನೆಯ ಬಳಿ ಕತ್ತಿಯಿಂದ ಎಳನೀರು ಕೆತ್ತುತ್ತಿದ್ದ ವೇಳೆ ಕತ್ತಿ ಕೈಯ ಬೆರಳಿಗೆ ತಾಗಿ ಬೆರಳು ತುಂಡರಿಸಿ ಕೊಂಡಿದ್ದು ಆಕೆಯನ್ನು ಸುಳ್ಯ ಆಸ್ಪತ್ರೆಗೆ ಕರೆತರುವಾಗ ನಿಖಿಲ್ ಎಂಬಾತ ತನ್ನ ಸಹಚರರೊಂದಿಗೆ ಸೇರಿ ನಾವು ಬರುತ್ತಿದ್ದ ಜೀಪ್ ಅನ್ನು ತಡೆದು ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಿ ಸುಳ್ಯ ಪೋಲೀಸ್ ಠಾಣೆಯಲ್ಲಿ ಮಹಿಳೆ ಪುಷ್ಪಾವತಿಯವರು ದೂರು ನೀಡಿದ ಘಟನೆ ವರದಿಯಾಗಿದೆ.
ಮಹಿಳೆ ನೀಡಿರುವ ದೂರಿನಲ್ಲಿ ನಾನು ಮತ್ತು ನನ್ನ ಪತಿ ಮಗಳನ್ನು ಆಸ್ಪತ್ರೆಗೆ ಕರೆತರಲು ಪಕ್ಕದ ಮನೆಯ ಲೋಹಿತ್ ಎಂಬವರಲ್ಲಿ ವಿಷಯ ತಿಳಿಸಿದ ಮೇರೆಗೆ ಲೋಹಿತ್ ರವರು ಬಾಡಿಗೆ ಜೀಪ್ ಅನ್ನು ಗೊತ್ತುಪಡಿಸಿ ತುರ್ತಾಗಿ ತಾವೇ ಚಲಾಯಿಸಿಕೊಂಡು ಬರುತ್ತಿದ್ದಾಗ ಆಲೆಟ್ಟಿಯ ಎಲ್ಲಿಕ್ಕಳ ಎಂಬಲ್ಲಿ ರಸ್ತೆ ನಡುವಿನಲ್ಲಿ ಮೂರು ದ್ವಿಚಕ್ರ ವಾಹನಗಳು ನಿಂತಿದ್ದು ಪಕ್ಕದಲ್ಲಿ ಐದು ಮಂದಿ ಯುವಕರು ಮಾತನಾಡುತ್ತಿದ್ದರು.
ಈ ಸಂದರ್ಭ ಜೀಪನ್ನು ಚಲಾಯಿಸುತ್ತಿದ್ದ ಲೋಹಿತ್ ಯುವಕರ ಬಳಿ ರಸ್ತೆ ಬಿಟ್ಟು ನಿಲ್ಲುವಂತೆ ಹಾಗೂ ಜೀಪಿನಲ್ಲಿ ತುರ್ತು ಚಿಕಿತ್ಸೆಗಾಗಿ ಬಾಲಕಿಯನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿರುವ ವಿಷಯ ಹೇಳಿದ್ದಾರೆ. ಈ ಸಂದರ್ಭದಲ್ಲಿ ಯುವಕರ ತಂಡದಲ್ಲಿದ್ದ ನಿಖಿಲ್ ಎಂಬವರು ತಮ್ಮ ಸಹಚರರೊಂದಿಗೆ ಸೇರಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಗಳನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದು ನಮಗೆ ರಸ್ತೆ ಬಿಟ್ಟುಕೊಡಿ ಎಂದು ಕೇಳಿಕೊಂಡರು ಮಹಿಳೆ ಎಂದೂ ಕೂಡ ನೋಡದೆ ನನ್ನನ್ನು ಹೊಡೆಯಲು ಬಂದಿದ್ದಾರೆ. ನಂತರ ಜೀಪು ಚಾಲಕ ಅವರ ವಿಡಿಯೋ ಮಾಡಲು ಹೊರಟಾಗ ಯುವಕರು ಅಲ್ಲಿಂದ ತೆರಳಿದ್ದಾರೆ.ಈ ಎಲ್ಲಾ ಕಾರಣದಿಂದ ಆಸ್ಪತ್ರೆಗೆ ತಲುಪಲು ಅರ್ಧಗಂಟೆ ತಡವಾದ ಹಿನ್ನೆಲೆಯಲ್ಲಿ ನನ್ನ ಮಗಳಿಗೆ ಸುಳ್ಯದಲ್ಲಿ ಚಿಕಿತ್ಸೆಗೆ ಸಾಧ್ಯವಾಗದೆ ಮಂಗಳೂರು ಆಸ್ಪತ್ರೆಗೆ ವೈದ್ಯರು ಕಳುಹಿಸಿದ್ದಾರೆ.
ಮಂಗಳೂರಿನ ಎ.ಜೆ ಆಸ್ಪತ್ರೆಗೆ ಕೊಂಡೊಯ್ದಾಗ ಅಲ್ಲಿಯೂ ಕೂಡ ತಡವಾಗಿ ಬಂದ ಕಾರಣ ಕೈಯ ಬೆರಳನ್ನು ಮರುಜೋಡಣೆ ಮಾಡಲು ಸಾಧ್ಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಈ ಎಲ್ಲಾ ಕಾರಣದಿಂದ ನನ್ನ ಮಗಳಿಗೆ ಜೀವನಪರ್ಯಂತ ಕೈ ಬೆರಳು ಇಲ್ಲದ ಸ್ಥಿತಿಗೆ ಬಂದಿರುತ್ತದೆ. ಇದೀಗ ಮಗಳು ತನಗೆ ಬೆರಳು ಜೀವನಪರ್ಯಂತ ಬರುವುದಿಲ್ಲವೆಂದು ನೊಂದುಕೊಂಡಿದ್ದಾಳೆ. ಇಷ್ಟಕ್ಕೂ ಈ ಎಲ್ಲಾ ಘಟನೆಗೆ ನಿಖಿಲ್ ಹಾಗೂ ಆತನ ಸಹಚರರೇ ಕಾರಣ ಎಂದು ದೂರಿನಲ್ಲಿ ಆರೋಪಿಸಿದ್ದು, ದಲಿತ ಕುಟುಂಬಕ್ಕೆ ಸೇರಿದ ನನಗೆ ಮತ್ತು ನನ್ನ ಮಗಳಿಗೆ ನ್ಯಾಯ ದೊರಕಿಸಿಕೊಟ್ಟು ದಾಂದಲೆ ನಡೆಸಿದ ಯುವಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಉಲ್ಲೇಖಿಸಿರುತ್ತಾರೆ.
ಘಟನೆಯ ಬಗ್ಗೆ ನಿಖಿಲ್ರವರ ಪ್ರತಿಕ್ರಿಯೆ: ಸುಳ್ಯದಿಂದ ಆಲೆಟ್ಟಿ ರಸ್ತೆಯ ಮೂಲಕ ನಾವು ದೋಣಿಮೂಲೆಯ ಮನೆಗೆ ಸ್ಕೂಟಿಯಲ್ಲಿ ಡೀಸೆಲ್ ತೆಗೆದುಕೊಂಡು ನಾನು ಮತ್ತು ನನ್ನ ತಮ್ಮ ಪೂಜಿತ್ ಸಾಗರ್ ಹೋಗುತ್ತಿರುವಾಗ ಎಲಿಕ್ಕಳ ಎಂಬಲ್ಲಿ ನಮ್ಮ ಗೆಳೆಯನ ಜತೆ ರಸ್ತೆಯ ಬದಿ ಗಾಡಿ ನಿಲ್ಲಿಸಿ ಮಾತಾಡುತ್ತಿರುವ ಸಂದರ್ಭ ಬಡ್ಡಡ್ಕ ಕಡೆಯಿಂದ ವೇಗವಾಗಿ ಬಂದ ಜೀಪನ್ನು ನಮ್ಮ ಹತ್ತಿರ ತಂದು ನಿಲ್ಲಿಸಿ ಜೀಪು ಚಾಲಕ ರೋಹಿತ್ ರಂಗತ್ತಮಲೆ ಯವರು (ದಾನೆ ಸೈಪನಯಾ) ಏನು ಸಾಯುತ್ತೀಯಾ ಎಂದು ಜೋರಾಗಿ ಕೇಳಿ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ .
ಇದರಿಂದ ನಮಗೂ ಸಿಟ್ಟು ಬಂದುದರಿಂದ ನಮ್ಮಿಬ್ಬರ ಮಧ್ಯೆ ೫ ನಿಮಿಷದ ಮಾತಿನ ಚಕಮಕಿ ನಡೆಯಿತು. ನಾವು ಜೀಪು ಹೋಗುವಷ್ಟು ಸ್ಥಳ ಬಿಟ್ಟು ಗಾಡಿ ನಿಲ್ಲಿಸಿ ಮಾತುಕತೆ ಮಾಡುತ್ತಿದ್ದೆವು ಹೊರತು ಜೀಪಿಗೆ ಅಡ್ಡ ನಿಲ್ಲಿಸಿಲ್ಲ. ವಿನಾಕಾರಣ ಜೀಪು ಚಾಲಕ ಜೋರು ಮಾತನಾಡಿ ಗಲಾಟೆ ಮಾಡಿದ್ದಾರೆ. ಅವರು ಅರ್ಧ ಗಂಟೆ ಅಡ್ಡಗಟ್ಟಿ ತೊಂದರೆ ನೀಡಿದ್ದಾರೆ ಎಂದು ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾದ ಮಾತು. ಜೀಪಿನಲ್ಲಿ ಆಸ್ಪತ್ರೆಗೆ ಹೋಗುವುದೆಂದು ತಿಳಿದ ಕೂಡಲೇ ನಾವು ಮಾತು ನಿಲ್ಲಿಸಿ ಹೋಗಲು ಹೇಳಿದ್ದೇವೆ. ಕೇವಲ ೫ ನಿಮಿಷ ಮಾತ್ರ ನಮ್ಮೊಳಗೆ ಮಾತಿನ ಚಕಮಕಿಯಾಗಿದೆ. ವಿನಾಕಾರಣ ಇಲ್ಲ ಸಲ್ಲದ ಆರೋಪ ಮಾಡಿ ನಮ್ಮ ಮೇಲೆ ಸುಳ್ಳು ದೂರು ನೀಡಿದ್ದಾರೆ ಎಂದು ದೋಣಿಮೂಲೆ ನಿವಾಸಿ ನಿಖಿಲ್ ತಿಳಿಸಿದ್ದಾರೆ.