ಮಂಗಳೂರು: ಸೋಲದೇವನಹಳ್ಳಿಯಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.2 ದಿನದ ಹಿಂದೆ ನಾಪತ್ತೆಯಾಗಿದ್ದ ಅಮೃತವರ್ಷಿಣಿ(21), ಭೂಮಿ(12), ಚಿಂತನ್(12), ರಾಯನ್(12) ಪತ್ತೆಯಾಗಿದ್ದಾರೆ.
ಬೆಂಗಳೂರಿನ ಸೋಲದೇವನಹಳ್ಳಿಯ ಕ್ರಿಟನ್ ಕುಶಾಲ್ ಅಪಾರ್ಟ್ಮೆಂಟ್ನ ನಾಲ್ವರು ಮಕ್ಕಳು ಪತ್ತೆಯಾಗಿದ್ದು ಸದ್ಯ ಈಗ ಪಾಂಡೇಶ್ವರ ಪೊಲೀಸರು ಮಕ್ಕಳನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಎಜಿಬಿ ಲೇಔಟ್ನ ನಾಲ್ವರು ಮಕ್ಕಳು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಅಮೃತವರ್ಷಿಣಿ ಮನೆಯಿಂದ ಹೋಗಬೇಕಾದ್ರೆ 70 ಗ್ರಾಂ ಚಿನ್ನದ ನೆಕ್ಲೆಸ್, 3000 ನಗದು ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಮಕ್ಕಳ ದಾಖಲೆಯನ್ನ ಎಲ್ಲಾ ಠಾಣೆಗಳಿಗೆ ರವಾನಿಸಿ ಮಕ್ಕಳನ್ನು ಹುಡುಕಲಾಗುತ್ತಿತ್ತು. ಸದ್ಯ ಈಗ ಮಕ್ಕಳು ಸಿಕ್ಕಿದ್ದಾರೆ.
ಬೆಂಗಳೂರು ಉತ್ತರ ವಲಯದಿಂದ 4 ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಲಾಗಿದ್ದು ಸೋಲದೇವನಹಳ್ಳಿ ಠಾಣೆ ಪೊಲೀಸರ ಮೇಲೆ ಒತ್ತಡ ಹೆಚ್ಚಾಗಿತ್ತು. ಒಂದೆಡೆ ಮಕ್ಕಳ ಪೋಷಕರು ಪೊಲೀಸರ ಮೇಲೆ ಒತ್ತಡ ಹಾಕಿದ್ರೆ ಮತ್ತೊಂದೆಡೆ ಮೇಲಧಿಕಾರಿಗಳಿಂದಲೂ ಒತ್ತಡ ಹಿನ್ನೆಲೆ ಪೊಲೀಸರಿಗೆ ನಾಪತ್ತೆ ಪ್ರಕರಣ ಸವಾಲಾಗಿ ಪರಿಣಮಿಸಿತ್ತು. ಈಗ ಈ ಪ್ರಕರಣ ಸುಖಾಂತ್ಯ ಕಂಡಿದೆ.
ಬೆಂಗಳೂರಿನ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದು ಹೇಗೆ..?
ಕಳೆದ ಎರಡು ದಿನಗಳ ಹಿಂದೆ ಸೋಲದೇವನಹಳ್ಳಿಯಿಂದ ನಾಪತ್ತೆಯಾಗಿದ್ದ ಮಕ್ಕಳು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಮಕ್ಕಳು ನಾಪತ್ತೆಯಾಗುತ್ತಿದ್ದಂತೆ ಸೋಲದೇವನಹಳ್ಳಿಯ ಪೊಲೀಸರು ಎಲ್ಲಾ ಕಡೆಗೂ ಮಕ್ಕಳ ಮಾಹಿತಿಯನ್ನು ರವಾನಿಸಿದ್ದರು. ಮಕ್ಕಳು ಬೆಂಗಳೂರಿನಿಂದ ಮಂಗಳೂರಿಗೆ ರೈಲಿನ ಮುಖಾಂತರ ಪ್ರಯಾಣ ಮಾಡಿ ಮಂಗಳೂರಿನಲ್ಲಿ ಇಳಿದಿದ್ದಾರೆ. ಈ ವೇಳೆ ಆಟೋ ಚಾಲಕನೊಬ್ಬ ನಾಪತ್ತೆಯಾಗಿದ್ದ ಮಕ್ಕಳನ್ನು ಗುರುತು ಹಿಡಿದು ಪಾಂಡೇಶ್ವರ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರಿಗೆ ಮಕ್ಕಳನ್ನು ಒಪ್ಪಿಸಿದ್ದಾನೆ.
ಮನೆಯಲ್ಲಿ ಟ್ರಿಪ್ಗೆ ಕಳಿಸ್ತಿರಲಿಲ್ಲ. ಹಾಗಾಗಿ ಟ್ರಿಪ್ ಗೆ ಹೋದೆವು..!!
ಇನ್ನು ಮಕ್ಕಳು ಪತ್ತೆಯಾದ ಬಳಿಕ ಪಾಂಡೇಶ್ವರ್ ಠಾಣೆ ಪೊಲೀಸರು ಮಕ್ಕಳಿಗೆ ತಿಂಡಿ ನೀಡಿ ವಿಚಾರಣೆ ನಡೆಸಿದ್ದಾರೆ. ಮನೆಯಿಂದ ಹೊರ ಬರಲು ಕಾರಣ ಕೇಳಿದ್ದಾರೆ. ಈ ವೇಳೆ ಮಕ್ಕಳು ನಾವು ಮನೆಯಲ್ಲಿ ಟ್ರಿಪ್ಗೆ ಕರೆದುಕೊಂಡು ಹೋಗಿ ಅಂದರೆ ಟ್ರಿಪ್ಗೆ ಹೋಗುತ್ತಿರಲಿಲ್ಲ. ನಾವೇ ಹೋಗುತ್ತೀವೆ ಎಂದರೂ ಕಳಿಸುತ್ತಿರಲಿಲ್ಲ. ಹೀಗಾಗಿ ನಾವೆಲ್ಲ ವಾಕಿಂಗ್ಗೆ ಹೋಗುತ್ತೇವೆ ಎಂದು ಹೇಳಿ ಮನೆಯಿಂದ ಹೊರ ಬಂದು ಟ್ರಿಪ್ಗೆ ಬಂದೆವು ಎಂದು ತಿಳಿಸಿದ್ದಾರೆ. ಸದ್ಯ ಇಷ್ಟು ಮಾಹಿತಿ ಸಿಕ್ಕಿದ್ದು ಮುಂದೆ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಪೊಲೀಸರಿಂದ ಮಕ್ಕಳ ವಿಚಾರಣೆ ಮುಂದುವರೆದಿದೆ. ಮಕ್ಕಳು ಸಿಕ್ಕಿರುವ ಬಗ್ಗೆ ಪೋಷಕರಿಗೂ ಮಾಹಿತಿ ನೀಡಲಾಗಿದೆ.