ಮಂಗಳೂರು/ಉಡುಪಿ: ಬೇಡಿಕೆಗಳಿಗೆ ಸರಕಾರ ಮಣಿಯದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಮಾ. 1ರಿಂದ ನಡೆಸಲುದ್ದೇಶಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ಬಹುತೇಕ ಖಚಿತವಾಗಿದೆ.
ಸಂಘಕ್ಕೆ 55 ಇತರ ವೃಂದ ಸಂಘಟನೆಗಳೂ ಬೆಂಬಲ ಘೋಷಿಸಿವೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲೂ ಸರಕಾರಿ ಶಾಲಾ ಕಾಲೇಜು, ಮಂಗಳೂರು ಮಹಾನಗರ ಪಾಲಿಕೆ, ಉಡುಪಿ ನಗರಸಭೆ, ವಿವಿಧ ಪುರಸಭೆ, ಪಟ್ಟಣ ಪಂಚಾಯತ್ ಮತ್ತಿತರ ಸ್ಥಳೀಯ ಸಂಸ್ಥೆಗಳು, ಸರಕಾರಿ ಆಸ್ಪತ್ರೆಗಳು, ಸಾರಿಗೆ ಇಲಾಖೆ ಸಹಿತ ಬಹುತೇಕ ಎಲ್ಲ ಸರಕಾರಿ ಸೇವೆಗಳಲ್ಲಿ ವ್ಯತ್ಯಯವಾಗುವ ಆತಂಕ ಎದುರಾಗಿದೆ.
ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗ ಕಾರ್ಯನಿರ್ವಹಿಸುವುದಿಲ್ಲ, ಆದರೆ ತುರ್ತು ಸೇವಾ ವಿಭಾಗಗಳಲ್ಲಿ ಸಿಬಂದಿ ಕಪ್ಪು ಪಟ್ಟಿ ಧರಿಸಿ ಕೆಲಸ ನಿರ್ವಹಿಸುವರು. ಸರಕಾರಿ ನೌಕರರ ವೇತನ ಪರಿಷ್ಕರಣೆ ಕುರಿತು ರಾಜ್ಯ ಬಜೆಟ್ನಲ್ಲಿ ಘೋಷಣೆ ಮಾಡದಿರುವುದು, ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದು ಪಡಿಸುವಂತೆ ಆಗ್ರಹಿಸಿ ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ.
ಸರಕಾರಿ ನೌಕರರು ಮಾ. 1ರಂದು ಕಚೇರಿಗೆ ಆಗಮಿಸದೆ ಮುಷ್ಕರ ನಡೆಸಲಿದ್ದಾರೆ. ಆದರೆ ಎಲ್ಲೂ ಸರಕಾರದ ವಿರುದ್ಧ ಘೋಷಣೆ ಕೂಗುವುದು, ಧರಣಿ, ಪ್ರತಿಭಟನೆ ನಡೆಸುವುದಿಲ್ಲ. ಕಚೇರಿಗೆ ಆಗಮಿಸುವವರ ಮನವೊಲಿಕೆ ಮಾಡಿ ಮುಷ್ಕರಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಸಂಘದ ದ.ಕ. ಜಿಲ್ಲಾಧ್ಯಕ್ಷ ಪಿ.ಕೆ. ಕೃಷ್ಣ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಅಂಪಾರು ದಿನಕರ ಶೆಟ್ಟಿ ತಿಳಿಸಿದ್ದಾರೆ.
ತಮ್ಮದು ನಿಗಮವಾದ್ದರಿಂದ ಕೆಎಸ್ಸಾರ್ಟಿಸಿಯವರು ಬೆಂಬಲ ಸೂಚಿಸಿಲ್ಲ, ಆದ್ದರಿಂದ ಬಸ್ ಸೇವೆ ಅಬಾಧಿತವಾಗಿರುತ್ತದೆ. ಶಾಲಾ ಕಾಲೇಜಿಗೆ ಯಾವುದಾದರೂ ಪರೀಕ್ಷೆ ನಡೆಯಬೇಕಾಗಿದ್ದರೆ ಮುಂದೂಡಬೇಕಾಗುತ್ತದೆ, ಆದರೆ ಕೆಪಿಟಿಸಿಎಲ್, ಮೆಸ್ಕಾಂ ಸಿಬ್ಬಂದಿ ಮುಷ್ಕರಕ್ಕೆ ಬೆಂಬಲ ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ.
ಉಡುಪಿ ನಗರ ಹಾಗೂ ಮಂಗಳೂರು ನಗರದಲ್ಲಿ ಕಸ ವಿಲೇವಾರಿಯ ವಿಭಾಗದಲ್ಲಿ ಸರಕಾರಿ ನೌಕರರು ಕಾರ್ಯನಿರ್ವಹಿಸುವುದರಿಂದ ತ್ಯಾಜ್ಯ ವಿಲೇವಾರಿ ಕೂಡ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶದಲ್ಲೂ ಇದು ಮರುಕಳಿಸಬಹುದು.
ಪಿಡಿಒ, ಗ್ರಾ.ಪಂ. ಕಾರ್ಯದರ್ಶಿಗಳು ಬೆಂಬಲ ವ್ಯಕ್ತಪಡಿಸಿರುವುದರಿಂದ ಗ್ರಾ.ಪಂ.ಗಳಲ್ಲಿ ಸೇವೆ ಇರುವುದಿಲ್ಲ. ಆಪರೇಟರ್, ಬಿಲ್ ಸಂಗ್ರಹ ಇತ್ಯಾದಿ ಸೇವೆಗಳು ಎಂದಿನಂತೆ ನಡೆಯಲಿದೆ.
ಸರಕಾರಿ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಬುಧವಾರ ನಡೆಯಲಿದ್ದ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಮಂಗಳೂರು ವಿವಿ ಕುಲಸಚಿವ (ಆಡಳಿತ) ಪ್ರೊ. ಕಿಶೋರ್ ಕುಮಾರ್ ಸಿ.ಕೆ. ತಿಳಿಸಿದ್ದಾರೆ.
ಸರಕಾರಿ ನೌಕರರ ಮನವೊಲಿಸುವ ಕಾರ್ಯ ಮಾಡುತ್ತಿದ್ದೇವೆ. ಈಗಾಗಲೇ ವಿವಿಧ ಸಂಘಟನೆಯವರು ಮನವಿ ಸಲ್ಲಿಸಿದ್ದಾರೆ. ಸರಕಾರದ ಹಂತದಲ್ಲಿ ಚರ್ಚೆಯಾಗುತ್ತಿರುವುದರಿಂದ ಜಿಲ್ಲಾ ಹಂತದಲ್ಲಿ ಯಾವುದೇ ನಿರ್ಧಾರ ಸಾಧ್ಯವಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ತಿಳಿಸಿದ್ದಾರೆ..