ಮೈಸೂರು: ಭೂ ಮಾಫಿಯಾ ಬಗ್ಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪ್ರತಿಕ್ರಿಯೆ ನೀಡಿದ್ದು..ನನಗೆ ಕೆಲಸ ಮಾಡಲು ಬಿಡಲಿಲ್ಲ. ಕೆಲವರು ಅನಗತ್ಯವಾಗಿ ತೊಂದರೆ ಕೊಟ್ಟರು. ಭೂಮಿ ಒತ್ತುವರಿ ತೆರವು ಮಾಡಲು ನಾನು ಪ್ರಯತ್ನ ಮಾಡಿದ್ದೆ ಎಂದಿದ್ದಾರೆ.
ವರ್ಗಾವಣೆ ಬೆನ್ನಲ್ಲೇ ಮಾತನಾಡಿದ ಅವರು, ಕೆರೆಗಳನ್ನು ಉಳಿಸೋದು, ಸರ್ಕಾರಿ ಭೂಮಿ ರಕ್ಷಣೆ ಮಾಡೋದು ನನ್ನ ಆದ್ಯತೆ ಆಗಿತ್ತು. ಆ ನಿಟ್ಟಿನಲ್ಲಿ ಮೊದಲ ದಿನದಿಂದಲೂ ಕಾರ್ಯ ನಿರ್ವಹಿಸುತ್ತಿದ್ದೆ. ಕೇರ್ಗಳ್ಳಿ ಕೆರೆಯ ಒತ್ತುವರಿ ತೆರವು ಮಾಡಿ ನೀರು ತುಂಬಿಸಲು ಪ್ರಯತ್ನಿಸಿದ್ದೆ. ಅದರ ಜತೆಗೆ ಸರ್ವೇ ನಂ. 4ರ 1500 ಎಕರೆ ಜಾಗ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ನಲ್ಲೂ ಒಳ್ಳೆಯ ಲಾಯರ್ ಇಟ್ಟು ಹೋರಾಟ ಮಾಡುತ್ತಿದ್ದೇವೆ. ಕೋವಿಡ್ ನಿಯಂತ್ರಣಕ್ಕೂ ಪ್ರಾಮುಖ್ಯತೆ ಕೊಟ್ಟು ಕೆಲಸ ಮಾಡಿದ್ದೇನೆ. ವ್ಯಾಕ್ಸಿನೇಷನ್ನಲ್ಲಿ ಮೈಸೂರು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಜುಲೈ ವೇಳೆಗೆ ಮೈಸೂರನ್ನು ಕೊರೊನಾ ಮುಕ್ತ ಅಂತ ಘೋಷಣೆ ಮಾಡಬೇಕು ಅನ್ನುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ ಎಂದರು.
ನಾನು ಒಬ್ಬ ಅಧಿಕಾರಿ, ನಾವು ನಮ್ಮ ಕೆಲಸದ ಮುಖಾಂತರವೇ ಇತರರಿಗೆ ಉತ್ತರ ನೀಡಬೇಕು, ನಾನು ನನ್ನ ಕೆಲಸದ ಮೂಲಕವೆ ಗುರುತಿಸಿಕೊಂಡಿದ್ದು,ಗಾಂಧೀಜಿ ಹೇಳಿದಂತೆ ‘ನನ್ನ ಕೆಲಸದ ಮೂಲಕವೇ ಉತ್ತರ ಕೊಡ್ತೀನಿ’ ಎಂದು ಹೇಳಿದರು.
‘ನಮಗೆ ನಮ್ಮ ಕೆಲಸ ಮಾಡಲು ಬಿಡಬೇಕಿತ್ತು, ಅನಾವಶ್ಯಕವಾಗಿ ನಮ್ಮ ಕೆಲಸದ ವಿಷಯವಾಗಿ ತಲೆ ಹಾಕಬಾರದಿತ್ತು’. ಕೆಲಸ ಮಾಡುವಾಗ ಪ್ರತಿದಿನ ಯಾರ್ಯಾರು ಕರೆಸಿ ಪ್ರಶ್ನೆ ಮಾಡುವುದು ಸರಿಯಾದ ಬೆಳವಣಿಗೆ ಅಲ್ಲ ಆಡಳಿತಕ್ಕೆ, ಆಡಳಿತಕ್ಕೆ ಆಡಳಿತ್ಮಾಕವಾದಂತಹ ಒಂದು ಚೌಕಟ್ಟು ಇರುತ್ತದೆ ಅದರಲ್ಲಿ ಅವರು ಕೆಲಸ ಮಾಡಿಕೊಂಡು ಹೋಗುತ್ತಿರುತ್ತಾರೆ. ಒಬ್ಬರನ್ನು ತೆಗೆದು ಹಾಕುವುದು, ವರ್ಗಾವಣೆ ಮಾಡುವುದು ಸ್ವಲ್ಪ ವಿಷಾದನೀಯ ವಿಷಯವಾಗಿದೆ ಎಂದರು.