ರಾಯಪುರ್: ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ವರ್ಗಾವಣೆ ಮಾಡಿರುವ ಆರೋಪದಡಿ ಛತ್ತೀಸ್ಗಢದ ರಾಯಪುರದಲ್ಲಿರುವ ನ್ಯಾಯಾಲಯ ಮಂಗಳೂರಿನ ದಂಪತಿ ಸೇರಿ ನಾಲ್ವರಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಉಗ್ರನಿಗ್ರಹ ಕಾಯ್ದೆಯಾಗಿರುವ ಆಕ್ರಮ ಚಟುವಟಿಕೆ(ತಡೆ) ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಭಯೋತ್ಪಾದಕ ಚಟುವಟಿಕೆಗೆ ಹಣ ವರ್ಗವಣೆ ಮಾಡಿದ ಆರೋಪದ ಮೇಲೆ ಈ ನಾಲ್ವರಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಅಜಯ್ ಸಿಂಗ್ ರಜಪೂತ್ ಅವರು ಮಂಗಳೂರು ಮೂಲದ ಜುಬೈರ್ ಹುಸೇನ್ (42) ಮತ್ತುಆತನ ಪತ್ನಿ ಆಯೇಷಾ ಬಾನೋ (39) ಹಾಗೂ ಧೀರಜ್ ಸಾವೊ (21), ಪಪ್ಪು ಮಂಡಲ್ ಸೇರಿ ನಾಲ್ವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ.
ಡಿ. 2013 ರಲ್ಲಿ, ರಾಯ್ಪುರದ ಖಮ್ತರಾಯ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರವೊಂದರಲ್ಲಿ ರಸ್ತೆಬದಿಯ ಉಪಾಹಾರ ಗೃಹವನ್ನು ನಡೆಸುತ್ತಿದ್ದ ಬಿಹಾರದ ಜಮುಯಿ ನಿವಾಸಿ ಸಾವೊ ಎಂಬಾತನನ್ನು ಬಂಧಿಸಲಾಗಿತ್ತು.
ಈತನ ಮೇಲೆ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಬಂಧ ಹೊಂದಿದ ಆರೋಪವಿತ್ತು. ಮುಜಾಹಿದೀನ್, ಸಿಮಿ ಸಂಘಟನೆ ಜೊತೆ ಸಂಬಂಧ ಹೊಂದಿದವರಿಗೆ ಪಾಕಿಸ್ತಾನದ ಖಾಲಿದ್ ಎಂಬವನಿಂದ ಹಣ ಪಡೆದು ಉಗ್ರರ ಖಾತೆಗೆ ರವಾನಿಸುತ್ತಿದ್ದನು.ಅದರಂತೆಯೇ ಮಂಗಳೂರಿನ ಜುಬೇರ್ ಹುಸೇನ್ ಮತ್ತು ಆಯೇಷಾ ಬಾನೋ ದಂಪತಿಗಳಿಗೂ ಈತ ಹಣವನ್ನು ಜಮೆ ಮಾಡುತ್ತಿದ್ದ.
ನಿಷೇಧಿತ ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ ಉಗ್ರರ ಜೊತೆ ನಂಟನ್ನು ಹೊಂದಿದ್ದ ದಂಪತಿ, ಉಗ್ರ ಸಂಘಟನೆಗಳ ಜತೆ ನಂಟು ಹೊಂದಿದ್ದ ಆಯೇಷಾ ಬಿಹಾರದ 50 ಬ್ಯಾಂಕ್ ಖಾತೆಗಳನ್ನು ನೆಟ್ ಬ್ಯಾಂಕಿಂಗ್ಮೂಲಕ ನಿರ್ವಹಿಸುತ್ತಿದ್ದರು.
2013ರಲ್ಲಿ ಸಂಭವಿಸಿದ್ದ ಪಟನಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಇಂಡಿಯನ್ ಮುಜಾಹಿದೀನ್ ಸಂಘಟನೆಯ ತೆಹಸೀನ್ ಅಖ್ತರ್ಗೆ ಹಣಕಾಸು ಪೂರೈಕೆ ಮಾಡುತ್ತಿದ್ದದ್ದು ಈಕೆಯೇ. ಆಯೇಷಾಗೆ ಪಾಕಿಸ್ತಾನದ ವ್ಯಕ್ತಿಯೊಬ್ಬನಿಂದ ಸೂಚನೆ ಬರುತ್ತಿತ್ತು. ವಿದೇಶಗಳಿಂದ ಅಮಾಯಕ ಜನರ ಖಾತೆಗೆ ಹಣ ವರ್ಗಾಯಿಸಿ ಅದನ್ನು ಆಯೇಷಾ ನಿರ್ವಹಿಸುತ್ತಿದ್ದಳು. ಸುಮಾರು 1 ಕೋಟಿ ರು. ಹಣವನ್ನು ವರ್ಗಾವಣೆ ಮಾಡಿದ್ದಳು. ಆದಾಯ ತೆರಿಗೆ ಇಲಾಖೆ ಕಣ್ತಪ್ಪಿಸಲು 49 ಸಾವಿರ ಅಥವಾ ಅದಕ್ಕಿಂತಲೂ ಕಡಿಮೆ ಮೊತ್ತದಲ್ಲಿ ಒಂದು ಬಾರಿಗೆ ಹಣ ಕಳುಹಿಸುತ್ತಿದ್ದಳು. ಭಯೋತ್ಪಾದನೆ ಪ್ರಕರಣದಲ್ಲಿ ನಾಲ್ವರು ಬಿಹಾರದಲ್ಲಿ ಬಂಧನವಾಗುವುದರೊಂದಿಗೆ ಆಯೇಷಾ ವೃತ್ತಾಂತ ಬಯಲಾಗಿತ್ತು. 2013ರಲ್ಲಿ ಈಕೆಯನ್ನು ಬಿಹಾರ ಪೊಲೀಸರು ಮಂಗಳೂರಿಗೇ ಬಂದು ಬಂಧಿಸಿದ್ದರು.