ಉಡುಪಿ: ನಾಳೆಯೂ ಹಿಜಾಬ್ ಧರಿಸಿ ಮತ್ತೆ ನಾಟಕ ಮಾಡಿದರೆ ತಕ್ಷಣ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಇಲ್ಲದಿದ್ದರೆ ನಾವೇ ನ್ಯಾಯಾಂಗ ನಿಂದನೆ ಕೇಸು ದಾಖಲಿಸುತ್ತೇವೆ. ಇವರೇನು ಅನ್ನ ತಿನ್ನಲ್ವ ಎಂದು ಉಡುಪಿ ಶಾಸಕ ರಘುಪತಿ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಹಿಜಾಬ್ ಧರಿಸಿದ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೇ ಹಿಂತಿರುಗಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೊಂದು ಷಡ್ಯಂತ್ರ ಅನ್ನುವುದು ಸಾಬೀತಾಗಿದೆ. ನಿನ್ನೆ ಸಂಜೆಯವರೆಗೆ ಅವರಿಗೆ ಫೋನ್ ಮಾಡಿ ಹಾಲ್ ಟಿಕೆಟ್ ಪಡೆಯಲು ಹೇಳಿದ್ದೆವು. ಇಂದು ಬೆಳಗಿನವರೆಗೂ ಹಾಲ್ ಟಿಕೆಟ್ ಪಡೆಯಲು ಬರದೇ. ಬೆಳಿಗ್ಗೆ ಒಂಬತ್ತು ಮೂವತ್ತಕ್ಕೆ ಕಾಲೇಜಿಗೆ ಬಂದಿದ್ದಾರೆ. ಈ ವೇಳೆ ಹಿಜಾಬ್ ತೆಗೆದಿಟ್ಟು ಹೋದರೆ ಮಾತ್ರ ಹಾಲ್ ಟಿಕೆಟ್ ಕೊಡುವುದಾಗಿ ಪ್ರಾಂಶುಪಾಲರು ಹೇಳಿದ್ದರು.
ಹಿಜಾಬ್ ತೆಗೆದು ಹಾಲ್ ಟಿಕೆಟ್ ಪಡೆದುಕೊಂಡು ಹೋಗಿದ್ದಾರೆ. ನಂತರ ಎಕ್ಸಾಮ್ ಸೆಂಟರ್ಗೆ ಹೋಗಿ ಡ್ರಾಮಾ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜೊತೆ ಮಾತನಾಡಿದ್ದೇನೆ. ನಾಳೆ ಮತ್ತೆ ನಾಟಕ ಮಾಡಿದರೆ ನ್ಯಾಯಾಂಗ ನಿಂದನೆ ಕೇಸು ದಾಖಲಿಸಲು ಹೇಳಿದ್ದೇನೆ ಎಂದು ಅವರು ಹೇಳಿದ್ದರು.
ಇವರೇನು ಹುಡುಗಾಟಿಕೆ ಮಾಡುತ್ತಿದ್ದಾರಾ..? ಇವರು ಮುಗ್ದ ಮಕ್ಕಳಲ್ಲ ಹೈಕೋರ್ಟ್ನ ಅರ್ಜಿದಾರರು. ಹಿಜಾಬ್ ಮತ್ತು ಪರೀಕ್ಷೆಗೆ ಸಂಬಂಧ ಇಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಕೂಡ ಹೇಳಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುವುದೇ ಇವರ ಉದ್ದೇಶ.
ಇವರಿಂದ ಬೇರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ನನಗೆ ಅನೇಕ ಪೋಷಕರು ಕರೆ ಮಾಡಿದ್ದಾರೆ. ಯಾಕೆ ವಿದ್ಯಾರ್ಥಿನಿಯರಿಗೆ ಕಡಿವಾಣ ಹಾಕುವುದಿಲ್ಲ ಎಂದು ಕೇಳುತ್ತಿದ್ದಾರೆ. ಈವೆರೆಗೆ ಸಂಘಟನೆಯ ಕೈವಾಡ ಎಂದು ಹೇಳುತ್ತಿದ್ದೆವು. ಈ ಮಕ್ಕಳು, ಇವರ ಪೋಷಕರು ಅನ್ನ ತಿನ್ನುವುದಿಲ್ಲವಾ. ಈವರೆಗೂ ಹೆಣ್ಣು ಮಕ್ಕಳು ಮುಗ್ಧರು ಎಂದು ಭಾವಿಸಿದ್ದೆ. ನಾಳೆ ಸಂಘಟನೆಯವರು ಭಯೋತ್ಪಾದಕರಾಗಿ ಅಂತಾರೆ. ಗನ್ ಹಿಡಿದುಕೊಳ್ಳಿ ಅಂತಾರೆ, ಅದನ್ನು ಇವರು ಕೇಳುತ್ತಾರಾ ಎಂದು ಪ್ರಶ್ನಿಸಿದರು.